ಮೊಘಲ್ ಸಾಮ್ರಾಜ್ಯ
From Wikipedia
ಮೊಘಲ್ ಸಾಮ್ರಾಜ್ಯ (ಉರ್ದು:: مغل باد شاہ) ಭಾರತೀಯ ಉಪಖಂಡದ ಉತ್ತರ ಭಾಗಗಳನ್ನು ೧೫೨೬ ರಿಂದ ಆಳಿದ ಮುಖ್ಯ ಸಾಮ್ರಾಜ್ಯಗಳಲ್ಲಿ ಒಂದು. ಮೊಘಲ್ ಸಾಮ್ರಾಜ್ಯದ ಸ್ಥಾಪನೆ ೧೫೨೬ ರಲ್ಲಿ ಬಾಬರ್ ನಿಂದ ನಡೆಯಿತು - ಮೊದಲ ಪಾಣಿಪಟ್ ಯುದ್ಧದಲ್ಲಿ ಇಬ್ರಾಹಿಮ್ ಲೋದಿಯನ್ನು ಸೋಲಿಸಿದ ನಂತರ.
ಹುಮಾಯೂನ್ ನ ಕಾಲದಲ್ಲಿ ಶೇರ್ ಷಾ ಮೊಘಲ್ ಸಾಮ್ರಾಜ್ಯವನ್ನು ಸೋಲಿಸಿದರೂ, ನಂತರ ಅಕ್ಬರ್ ನ ಕೆಳಗೆ ಮೇಲೇರಲಾರಂಭಿಸಿದ ಮೊಘಲ್ ಸಾಮ್ರಾಜ್ಯ ಔರಂಗಜೇಬನ ಕಾಲದ ವರೆಗೂ ಬೆಳೆಯಿತು. ೧೭೦೭ ರಲ್ಲಿ ಔರಂಗಜೇಬನ ಮರಣದ ನಂತರ ೧೫೦ ವರ್ಷಗಳ ಕಾಲ ಭಾರತದಲ್ಲಿ ಉಳಿದರೂ ಮೊಘಲ್ ಸಾಮ್ರಾಜ್ಯದ ಶಕ್ತಿ ಕುಂದುತ್ತಾ ಬ೦ದಿತು - ೧೮೫೭ ರಲ್ಲಿ ಬಹಾದುರ್ ಷಾ ನ ಬಹಿಷ್ಕಾರದ ನಂತರ ಮೊಘಲ್ ಸಾಮ್ರಾಜ್ಯ ಕೊನೆಗೊಂಡಿತು.
ಪರಿವಿಡಿ |
[ಬದಲಾಯಿಸಿ] ಚಕ್ರವರ್ತಿಗಳು
ಮೊಘಲ್ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿಗಳು ಮತ್ತು ಅವರ ಆಡಳಿತದ ಕಾಲ:
- ಬಾಬರ್ (೧೫೨೬ - ೧೫೩೦)
- ಹುಮಾಯೂನ್ (೧೫೩೦-೧೫೫೬)
- ಅಕ್ಬರ್ (೧೫೫೬-೧೬೦೫)
- ಜಹಾಂಗೀರ್ (೧೬೦೫-೧೬೨೭)
- ಷಾ ಜಹಾನ್ (೧೬೨೭-೧೬೫೮)
- ಔರಂಗಜೇಬ್ (೧೬೫೮-೧೭೦೭)
[ಬದಲಾಯಿಸಿ] ಸ್ಥಾಪನೆ ಮತ್ತು ಬಾಬರ್ನ ಆಡಳಿತ
೧೬ ನೆಯ ಶತಮಾನದ ಆರ೦ಭದಲ್ಲಿ ಜಹೀರುದ್ದೀನ್ ಬಾಬರನ ನೇತೃತ್ವದಲ್ಲಿ ಮ೦ಗೋಲ್, ಟರ್ಕಿಷ್ ಮತ್ತು ಆಫ್ಘನ್ ಸೈನಿಕರು ಭಾರತದ ರಾಜ್ಯಗಳನ್ನು ಗೆಲ್ಲುವ ಉದ್ದೇಶದಿ೦ದ ಬ೦ದರು. ೧೩೯೮ ರಲ್ಲಿ ದೆಹಲಿಯ ಮೆಲೆ ದ೦ಡೆತ್ತಿ ಲೂಟಿ ನಡೆಸಿದ್ದ ತೈಮೂರನ ಮರಿಮಗ ಬಾಬರ್. ಇ೦ದಿನ ಉಜ್ಬೆಕಿಸ್ತಾನದಲ್ಲಿರುವ ಸಮರ್ಕ೦ದದಲ್ಲಿ ಸ್ವಲ್ಪ ಕಾಲ ಆಡಳಿತ ನಡೆಸಿದ್ದ ಬಾಬರ್ ೧೫೦೪ ರಲ್ಲಿ ಕಾಬೂಲ್ ನಲ್ಲಿ ರಾಜ್ಯ ಸ್ಥಾಪಿಸಿ ನ೦ತರ ಪ೦ಜಾಬ್ ಅನ್ನು ಗೆದ್ದ ನ೦ತರ ದೆಹಲಿಯ ಸುಲ್ತಾನ ಇಬ್ರಾಹಿಮ್ ಲೋದಿಯತ್ತ ತಿರುಗಿದ. ಬಾಬರ್ ಮತ್ತು ಇಬ್ರಾಹಿಮ್ ಲೋದಿ ಯರ ಶತ್ರುತ್ವ ಮೊದಲ ಪಾಣಿಪಟ್ ಯುದ್ಧದಲ್ಲಿ ನಿರ್ಧಾರವಾಯಿತು.
ಬಾಬರ್ ಸುಮಾರು ೧೨,೦೦೦ ಸೈನಿಕರನ್ನು ಮಾತ್ರ ಹೊ೦ದಿದ್ದರೂ ಇಬ್ರಾಹಿಮ್ ಲೋದಿಯ ಸುಮಾರು ಒ೦ದು ಲಕ್ಷ ಸೈನಿಕರ ಸೇನೆಯನ್ನು ಸೋಲಿಸಿದ - ಮುಖ್ಯವಾಗಿ ಫಿರ೦ಗಿ ಮತ್ತು ಬ೦ದೂಕುಗಳ ಪರಿಣಾಮಕಾರಿ ಉಪಯೋಗದಿ೦ದ. ಒ೦ದು ವರ್ಷ ನ೦ತರ, ರಜಪೂತರ ರಾಣಾ ಸಂಘನ ಮೇಲೆ ವಿಜಯ ಸಾಧಿಸಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.
[ಬದಲಾಯಿಸಿ] ಹುಮಾಯೂನನ ಆಡಳಿತ
ಬಾಬರನ ಮರಣದ ನಂತರ ಅಧಿಕಾರಕ್ಕೆ ಬಂದ ಹುಮಾಯೂನ್ ಎಲ್ಲ ಕಡೆಗಳಿಂದ ಎದ್ದ ದಂಗೆಗಳನ್ನು ತಡೆಯಲಾರದೆ ತನ್ನ ಸಾಮ್ರಾಜ್ಯದ ಬಹುಭಾಗವನ್ನು ಶೇರ್ ಷಾ ನಿಗೆ ಸೋತು ೧೫೪೦ ರಲ್ಲಿ ಪರ್ಷಿಯಾಗೆ ತಪ್ಪಿಸಿಕೊಂಡು ಹೋಗಬೇಕಾಯಿತು. ೧೫೪೫ ರಲ್ಲಿ ಕಾಬೂಲ್ ನ ಮೇಲೆ ಮತ್ತೆ ಅಧಿಕಾರ ಸ್ಥಾಪಿಸಿ ೧೫೫೫ ರಲ್ಲಿ ದೆಹಲಿಯನ್ನು ವಶಪಡಿಸಿಕೊಂಡ. ಇದಾಗಿ ಒಂದು ವರ್ಷದಲ್ಲೇ ಹುಮಾಯೂನ್ ನ ಮರಣವಾಯಿತು.
[ಬದಲಾಯಿಸಿ] ಅಕ್ಬರ್
ಹುಮಾಯೂನ್ ನ ಅಕಸ್ಮಾತ್ ಮರಣದ ನಂತರ ಅಧಿಕಾರಕ್ಕೆ ಬಂದದ್ದು ಅವನ ೧೩ ವರ್ಷದ ಮಗ ಜಲಾಲುದ್ದೀನ್ ಅಕ್ಬರ್. ಮೊದಲಿಗೆ ಇವನ ಮಾವ ಬೈರಾಮ್ ಖಾನ್ ಅಕ್ಬರನ ಪರವಾಗಿ ಆಡಳಿತ ನಡೆಸಿದ. ವಯಸ್ಸಿಗೆ ಬಂದಂತೆ ಅಕ್ಬರ್ ಸ್ವಂತವಾಗಿ ಅಧಿಕಾರವನ್ನು ಕೈಗೆ ತೆಗೆದುಕೊಳ್ಳಲಾರಂಭಿಸಿದ. ಆಡಳಿತ ನೀತಿಗಳನ್ನು ಬಹಳವಾಗಿ ಸುಧಾರಿಸಿದ್ದಲ್ಲದೆ ಅಕ್ಬರ್ ಮೊಘಲ್ ಸಾಮ್ರಾಜ್ಯದ ವಿಸ್ತರಣೆಯನ್ನೂ ನಡೆಸಿದ - ಇಡಿಯ ಉತ್ತರ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಅಕ್ಬರನ ಸಾಮ್ರಾಜ್ಯ ಹಬ್ಬಿತು.
೧೫೭೧ ರಲ್ಲಿ ಅಕ್ಬರ್ ಫತೇಪುರ್ ಸಿಕ್ರಿ ನಗರವನ್ನು ಕಟ್ಟಿಸಿದ - ಆದರೆ ೧೫೮೫ ರಲ್ಲಿ ನೀರಿನ ಅಭಾವದಿಂದ ಲಾಹೋರ್ ಗೆ ತನ್ನ ರಾಜಧಾನಿಯನ್ನು ವರ್ಗಾಯಿಸಿದ. ೧೫೯೯ ರಲ್ಲಿ ಮತ್ತೆ ಆಗ್ರಾಕ್ಕೆ ತನ್ನ ರಾಜಧಾನಿಯನ್ನು ವರ್ಗಾಯಿಸಿದ.
ತನ್ನ ದೊಡ್ಡ ಸಾಮ್ರಾಜ್ಯವನ್ನು ಪರಿಣಾಮಕಾರಿಯಾಗಿ ಆಳುವುದಕ್ಕೆ ಅಕ್ಬರ್ ಅನೇಕ ಹೊಸ ನೀತಿಗಳನ್ನು ಜಾರಿಗೆ ತಂದ. ತನ್ನ ಮಂತ್ರಿಗಳಲ್ಲಿ ಒಬ್ಬನಾದ ತೋಡರಮಲ್ಲನ ನೇತೃತ್ವದಲ್ಲಿ ತನ್ನ ಸಾಮ್ರಾಜ್ಯದಾದ್ಯಂತ ನೆಲದ ಅಂದಾಜು, ಬೇರೆ ಬೇರೆ ಸ್ಥಳಗಳಲ್ಲಿ ಬೆಳೆಯುವ ಬೆಳೆಗಳು ಮತ್ತು ಮಣ್ಣಿನ ಫಲವತ್ತತೆಯ ಅಂದಾಜುಗಳನ್ನು ತರಿಸಿಕೊಂಡು ಇದಕ್ಕೆ ಅನುಸಾರವಾಗಿ ಭೂಕಂದಾಯವನ್ನು ನಿರ್ಧರಿಸಿದ. ತನ್ನ ಸಾಮ್ರಾಜ್ಯದಲ್ಲಿದ್ದ ವಿವಿಧ ಧರ್ಮಗಳ ಜನರನ್ನು ಆಳಲಿಕ್ಕೆ ಧರ್ಮಸಹಿಷ್ಣುತೆಯನ್ನು ಜಾರಿಗೆ ತಂದ.
[ಬದಲಾಯಿಸಿ] ಜಹಾಂಗೀರ್ ಮತ್ತು ಷಾ ಜಹಾನ್
ಜಹಾಂಗೀರ್ ಮತ್ತು ಷಾ ಜಹಾನರ ಆಡಳಿತದ ಮೊದಲ ವರ್ಷಗಳು ರಾಜಕೀಯ ಸ್ಥಿರತೆ, ಆರ್ಥಿಕ ಹೆಚ್ಚಳ, ಮತ್ತು ಕಲೆಯ ಬೆಳವಣಿಗೆಗೆ ಹೆಸರಾಗಿವೆ. ನೂರ್ ಜಹಾನಳ ಜಹಾಂಗೀರನ ಪಟ್ಟದ ರಾಣಿ ಪರ್ಷಿಯನ್ ರಾಜಕುಮಾರಿ ನೂರ್ ಜಹಾನ್ ("ಪ್ರಪಂಚದ ಬೆಳಕು"). ನೂರ್ ಜಹಾನಳ ಕಾಲದಲ್ಲಿ ಅನೇಕ ಪರ್ಷಿಯನ್ ನಾಯಕರು ಮೊಘಲ್ ಆಸ್ಥಾನಕ್ಕೆ ಬಂದು ಇರಲಾರಂಭಿಸಿದರು. ಕೆಲಸ ಮಾಡದ ನಾಯಕರ ಸಂಖ್ಯೆ ಸರ್ಕಾರದಲ್ಲಿ ಹೆಚ್ಚುತ್ತ ಹೋದಂತೆ ಭ್ರಷ್ಟಾಚಾರ ಸಹ ಹೆಚ್ಚಲಾರಂಭಿಸಿತು. ಜಹಾಂಗೀರನ ಇಸ್ಲಾಮ್ ಮತಪ್ರಚಾರ ಮೊದಲಾದ ವಟುವಟಿಕೆಗಳಿಂದ ಮೊಘಲ್ ಸಾಮ್ರಾಜ್ಯದ ಪ್ರತಿಷ್ಠೆ ಸ್ಬಲ್ಪ ಕಡಿಮೆಯಾಯಿತು.
೧೬೨೨ ರಲ್ಲಿ ನೂರ್ ಜಹಾನ್ ಸಿಂಹಾಸನವನ್ನು ಪರ್ಷಿಯಾದ ತನ್ನ ಸಂಬಂಧಿಕರಿಗೆ ಕೊಡುವ ಪ್ರಯತ್ನ ಮಾಡಿದಾಗ ಷಾ ಜಹಾನ್ ದಂಗೆಯೆದ್ದು ಸಿಂಹಾಸವನ್ನೇರಿದ.
೧೬೩೬ ರಿಂದ ೧೬೪೬ ರ ನಡುವೆ ದಕ್ಷಿಣ ಭಾರತ ಮತ್ತು ಉತ್ತರ ಪಶ್ಚಿಮ ಭಾರತಗಳತ್ತ ಸೈನ್ಯವನ್ನು ಕಳುಹಿಸಿದ - ಯುದ್ಧಗಳಲ್ಲಿ ಗೆದ್ದರೂ ಈ ಯುದ್ಧಗಳ ವೆಚ್ಚ ಹೆಚ್ಚುತ್ತಾ ಹೋದಂತೆ ಸಾಮಾನ್ಯ ಜನರ ಮೇಲಿನ ಕಂದಾಯ ಹೆಚ್ಚುತ್ತಾ ಹೋಯಿತು. ಇಷ್ಟರ ಮಧ್ಯದಲ್ಲಿಯೂ ವಾಣಿಜ್ಯ ಮತ್ತು ಕಲೆಯ ಅನೇಕ ಕೇಂದ್ರಗಳು ಹುಟ್ಟಿದವು - ಲಾಹೋರ್, ದೆಹಲಿ, ಆಗ್ರಾ ಮತ್ತು ಅಹ್ಮದಾಬಾದ್.
೧೬೫೦ ರ ಸುಮಾರಿಗೆ ಷಾ ಜಹಾನನ ಪಟ್ಟದ ರಾಣಿ ಮಮ್ತಾಜ್ ಮಹಲಳ ನೆನಪಿನಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್ ಅನ್ನು ಕಟ್ಟಲಾಯಿತು.
[ಬದಲಾಯಿಸಿ] ಔರ೦ಗಜೇಬ್ ಮತ್ತು ಸಾಮ್ರಾಜ್ಯದ ಅವನತಿ
ಮೊಘಲ್ ಸಾಮ್ರಾಜ್ಯದ ಕೊನೆಯ ಪ್ರಮುಖ ಚಕ್ರವರ್ತಿ ಔರಂಗಜೇಬ್ (ಆಡಳಿತ: ೧೬೫೮ - ೧೭೦೭). ತನ್ನ ಅಣ್ಣ-ತಮ್ಮಂದಿರನ್ನು ಕೊಂದು ಅಧಿಕಾರಕ್ಕೆ ಏರಿದ ಔರಂಗಜೇಬನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯ ಇನ್ನೂ ದೊಡ್ಡದಾಗಿ ಹಬ್ಬಿದರೂ, ಅವನತಿಯ ಚಿಹ್ನೆಗಳು ಮೂಡಲಾರಂಭಿಸಿದವು. ಅಫ್ಘಾನಿಸ್ತಾನದಲ್ಲಿ ಪಠಾಣರ ಮೇಲೆ, ಬಿಜಾಪುರ ಮತ್ತು ಗೋಲಕೊಂಡದ ಸುಲ್ತಾನರ ಮೇಲೆ, ಮರಾಠರ ಮೇಲೆ ಮತ್ತು ಅಸ್ಸಾಮ್ ನ ಅಹೋಮ್ ಗಣದ ಮೇಲೆ ಸತತವಾಗಿ ನಡೆಸಿದ ಯುದ್ಧಗಳ ಪರಿಣಾಮವಾಗಿ ಸಾಮ್ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. ಇತರ ಧರ್ಮಗಳ ಮೇಲೆ ಔರಂಗಜೇಬ್ ಹೆಚ್ಚು ಸಹಿಷ್ಣುತೆ ತೋರದ್ದರಿಂದ ಅನೇಕ ಕಡೆ ದಂಗೆಗಳು ಏಳಲಾರ೦ಭಿಸಿದವು.
ಔರಂಗಜೇಬನ ನ೦ತರ ಬ೦ದ ಮೊಘಲ್ ರಾಜರು ಸಾಮ್ರಾಜ್ಯವನ್ನು ಸಮರ್ಥವಾಗಿ ಆಳುವಲ್ಲಿ ವಿಫಲರಾದರು - ನಿಧಾನವಾಗಿ ಕುಗ್ಗಿದ ಸಾಮ್ರಾಜ್ಯ ಕೊನೆಗೆ ೧೮೫೭ ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಸಂಪೂರ್ಣವಾಗಿ ನಿಂತಿತು.