ರಾಜಾರಾಮಣ್ಣ
From Wikipedia
ಡಾ. ರಾಜಾರಾಮಣ್ಣ ಆಧುನಿಕ ಭಾರತದ ಒಬ್ಬ ಅಪ್ರತಿಮ ವಿಜ್ಞಾನಿ. ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಗಿದ್ದ ರಾಜಾರಾಮಣ್ಣನವರು ೧೯೭೪ರಲ್ಲಿ ರಾಜಾಸ್ಥಾನದ ಪೊಕ್ರಾನ್ ನಲ್ಲಿ ಜರುಗಿದ ಭಾರತದ ಪ್ರಥಮ ಪರಮಾಣು ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಹೋಮಿ ಜಹಂಗೀರ್ ಭಾಬಾರವರ ಆಪ್ತ ಶಿಷ್ಯರಾಗಿದ್ದ ರಾಜರಾಮಣ್ಣನವರದು ಬಹುಮುಖ ಪ್ರತಿಭೆ. ಅವರು ಶ್ರೇಷ್ಟ ಪರಮಾಣು ವಿಜ್ಞಾನಿಯಲ್ಲದೆ ದಕ್ಷ ಆಡಳಿತಗಾರ, ಸಮರ್ಥ ಸಂಘಟಕ, ನುರಿತ ಪಿಯಾನೋ ಹಾಗು ವಿಯೋಲ ವಾದಕ, ವೇದೊಪನಿಷದ್ ಪಾರಂಗತ, ಉಪಾಧ್ಯಾಯ, ದಾರ್ಶನಿಕ, ರಾಜ್ಯಸಭೆ ಸದಸ್ಯ, ರಕ್ಷಣಾ ರಾಜ್ಯ ಮಂತ್ರಿ ಸಹ ಆಗಿದ್ದರು.
[ಬದಲಾಯಿಸಿ] ಜೀವನ
ರಾಜಾರಾಮಣ್ಣನವರ ಜನನ ಜನವರಿ ೨೮, ೧೯೨೫ ರಂದು ಕರ್ನಾಟಕದ ತುಮಕೂರಿನಲ್ಲಾಯಿತು. ಮದರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ ಎಸ್ಸಿ (ಆನರ್ಸ್) ಪದವಿ ಪಡೆದ ನಂತರ ೧೯೪೫ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನ ಅಭ್ಯಾಸಿಸಿ ೧೯೪೯ ರಲ್ಲಿ ಪಿ. ಎಚ್. ಡಿ. ಪದವಿಯನ್ನು ಪಡೆದರು. ತಮ್ಮ ೨೪ನೆ ವಯಸ್ಸಿಗೆ ಪಿ. ಎಚ್. ಡಿ ಪಡೆದ ರಾಜಾರಾಮಣ್ಣನವರ ತದನಂತರ ಭಾರತಕ್ಕೆ ಮರಳಿ ಹೋಮಿ ಜಹಂಗೀರ್ ಭಾಬಾರವರೊಡನೆ ಕೆಲಸ ಮಾಡತೊಡಗಿದರು. ಭಾರತದಲ್ಲಿ ಭೌತವಿಜ್ಞಾನದ ಅಭಿವೃದ್ದಿಗಾಗಿ ಶ್ರಮಿಸಿದ ರಾಜಾರಾಮಣ್ಣನವರು, ಪರಮಾಣು ಕೇಂದ್ರ ವಿದಳನೆಯ (ನ್ಯೂಕ್ಲಿಯರ್ ಫಿಜನ್) ವಿಷಯದಲ್ಲಿ ಆಳವಾದ ಸಂಶೋಧನೆ ನೆಡಸಿದ್ದರು. ರಾಜಾರಾಮಣ್ಣನವರು ೨ ಅವಧಿಗಳಲ್ಲಿ (೧೯೭೨-೧೯೭೮ ಹಾಗು ೧೯೮೧-೮೩ ) ಭಾಬಾ ಅಣು ಸಂಶೋಧನಾ ಕೇಂದ್ರದ(ಬಿ.ಏ.ಆರ್.ಸಿ ಅಥವಾ ಬಾರ್ಕ್) ನಿರ್ದೇಶಕರಾಗಿದ್ದರು. ೧೯೭೮ರಿಂದ ೧೯೮೧ರ ವರೆಗೆ ರಾಜಾರಾಮಣ್ಣನವರು ರಕ್ಷಣಾ ಮಂತ್ರಿಯ ವೈಜ್ಞಾನಿಕ ಸಲಹೆಗಾರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಢಿ ಸಂಸ್ಥೆಯ (ಡಿ.ಆರ್.ಡಿ.ಒ) ಮಹಾ ನಿರ್ದೇಶಕ, ಹಾಗು ರಕ್ಷಣಾ ಸಂಶೋಧನ ಕಾರ್ಯದರ್ಶಿ ಹೀಗೆ ೩ ಹುದ್ದೆಗಳನ್ನು ಎಕಕಾಲದಲ್ಲಿ ನಿರ್ವಹಿಸಿದ್ದರು. ಸೆಪ್ಟೆಂಬರ್ ೧ ೧೯೮೩ರಲ್ಲಿ ಅಣು ಶಕ್ತಿ ಆಯೋಗ (ಏ.ಇ.ಸಿ) ಹಾಗು ಭಾರತ ಸರ್ಕಾರದ ಅಣು ಶಕ್ತಿ ವಿಭಾಗದ(ಡಿ.ಎ.ಇ) ಕಾರ್ಯದರ್ಶಿ ಹುದ್ದೆಯನ್ನು ಸಹ ಅಲಂಕರಿಸಿ ೧೯೮೭ರಲ್ಲಿ ನಿವೃತ್ತರಾದರು. ತದನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಪ್ರೌಡ ಅಧ್ಯಯನ ಸಂಸ್ಥೆಯ (ಎನ್.ಐ.ಎ.ಎಸ್) ಅಧ್ಯಕ್ಷರಾಗಿ ೧೯೮೭ರಿಂದ ೧೯೮೯ರ ವರೆಗೆ ದುಡಿದರು. ಮಹನೀಯರು ದಿವಂಗತರಾದಗ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ಸಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ೧೯೯೦ರಲ್ಲಿ ರಾಜಾರಾಮಣ್ಣನವರು ವಿ.ಪಿ ಸಿಂಗ್ ಸರ್ಕಾರದಲ್ಲಿ ಕೆಲಕಾಲ ರಕ್ಷಣಾ ರಾಜ್ಯ ಸಚಿವರಾಗಿದ್ದರು ತದನಂತರ ೧೯೯೭ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ರಾಜಾರಾಮಣ್ಣನವರು ಭಾಬಾ ಅಣು ಸಂಶೋಧನಾ ಕೇಂದ್ರದದ ನಿರ್ದೇಶಕರಾಗಿದ್ದಾಗ ನೆಡದ ಮುಖ್ಯ ಘಟನೆಯೆಂದರೆ ಭಾರತದ ಪ್ರಥಮ ಅಣು ಬಾಂಬ್ ಪರೀಕ್ಷೆ. "ಪೊಕ್ರಾನ್-೧" ಅಥವಾ "ಆಪರೇಷನ್ ಸ್ಮೈಲಿಂಗ್ ಬುದ್ಧ" ಎಂದು ಕರೆಯಲಾಗುವ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗು ಯಶಸ್ವಿಯಾಗಿ ನೆಡಸಿದ ಶ್ರೇಯಸ್ಸು ರಾಜಾರಾಮಣ್ಣನವರಿಗೆ ಸಲ್ಲುತ್ತದೆ. ಶ್ರೀಯುತರು ಸೆಪ್ಟೆಂಬರ್ ೨೪, ೨೦೦೪ ರಂದು ಮುಂಬೈನಲ್ಲಿ ಅಸುನೀಗಿದರು.
ರಾಜಾರಾಮಣ್ಣನವರು ಉತ್ತಮ ಬರಹಗಾರರಾಗಿದ್ದರು. ಅವರ ಎರಡು ಉಲ್ಲೇಖನೀಯ ಕೃತಿಗಳೆಂದರೆ ಸ್ಟ್ರಕ್ಚರ್ ಆಫ್ ಮ್ಯುಸಿಕ್ ಇನ್ ರಾಗ ಎಂಡ್ ವೆಸ್ಟೆರ್ನ್ ಸಿಸ್ಟೆಮ್ಸ್ ಹಾಗು ಇಯರ್ಸ್ ಆಫ್ ಪಿಲಿಗ್ರಿಮೇಜ್: ಆನ್ ಆಟೋಬಯೋಗ್ರಫಿ'
[ಬದಲಾಯಿಸಿ] ಪ್ರಶಸ್ತಿಗಳು
- ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ
- ಪದ್ಮ ಶ್ರೀ
- ಪದ್ಮ ಭೂಷಣ
- ಪದ್ಮ ವಿಭೂಷಣ
- ಮೇಘನಾಥ್ ಸಹ ಪದಕ
- ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ