ಕುರುಡುಮಲೆ
From Wikipedia
ಕುರುಡುಮಲೆ ಕೋಲಾರ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಊರು. ಮುಳಬಾಗಿಲಿನಿಂದ ಅಂದಾಜು ೭ ಕಿ. ಮೀ ದೂರದಲ್ಲಿರುವ ಈ ಊರು, ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ.
ಊರಿನಲ್ಲಿರುವ ಗಣಪನ ದೇವಸ್ಥಾನ ಬಹಳ ಪ್ರಖ್ಯಾತ. ಇಲ್ಲಿಯ ೧೦ ಅಡಿ ಎತ್ತರದ, ಒಂದೇ ಕಲ್ಲಿನಲ್ಲಿ ಕೆತ್ತಿರುವ ಪ್ರಖ್ಯಾತ ವಿನಾಯಕನ ಮೂರ್ತಿ ದಿನನಿತ್ಯ ದೂರ ದೂರದಿಂದ ಉತ್ಸಾಹಿಗಳನ್ನು, ಭಕ್ತರನ್ನು ಇಲ್ಲಿಗೆ ಕರೆತರುತ್ತದೆ. ವಿನಾಯಕನ ಮೂರ್ತಿ ರಾಮಾಯಣದ ಕಾಲದ್ದೆಂದು ಸ್ಥಳೀಯರ ನಂಬಿಕೆ. ಇದೇ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಕುರುಡುಮಲೆ ಸೋಮೇಶ್ವರ ದೇವಸ್ಥಾನ ಚೋಳರ ಕಾಲದ ಶಿಲ್ಪಕಲೆಯಿಂದ ಕೂಡಿದೆ. ಚೋಳ ರಾಜನು ಸ್ವತಃ ಇಲ್ಲಿಗೆ ಬಂದು ಈ ದೇವಸ್ಥಾನವನ್ನು ಸಂಸ್ಥಾಪಿಸಿದ್ದನಂತೆ. ಇಲ್ಲಿಯ ಹಲವು ಶಿಲ್ಪಗಳು ಮುಸ್ಲಿಮ್ ದೊರೆಗಳ ದಾಳಿಯಲ್ಲಿ ಮುರಿದು ಹೋದವಂತೆ. ಅಳಿದುಳಿದ ಶಿಲ್ಪಕಲೆಯಲ್ಲಿ ಹಲವು ವಿಭಿನ್ನ ಮನಮೋಹಕ ಕಲಾಕೃತಿಗಳಿವೆ.
ಕುರುಡುಮಲೆಯ ಹೆಸರು ಮೊದಲು ಕೂಡುಮಲೆ ಎಂದಾಗಿತ್ತೆಂದೂ, ನಂತರ ಜನರಲ ಬಾಯಲ್ಲಿ ಅದು ಕುರುಡುಮಲೆ ಆಯಿತೆಂದೂ ಹಲವು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.